ಅರ್ಥವ್ಯವಸ್ಥೆ
ಹೊಯ್ಸಳ ಆಡಳಿತದ ಮುಖ್ಯ ಆದಾಯ ಮೂಲ ಕೃಷಿ ಆಧಾರಿತ ಅರ್ಥವ್ಯವಸ್ಥೆಯಾಗಿತ್ತು. ತಮಗೆ
ಸಲ್ಲಿಸಿದ ಸೇವೆಗೆ ಪ್ರತಿಯಾಗಿ ರಾಜರುಗಳು ಜಮೀನುಗಳನ್ನು ಜಹಗೀರು ನೀಡುತ್ತಿದ್ದರು. ಈ
ಜಹಗೀರದಾರರು ಆ ಜಮೀನಿನ ಒಕ್ಕಲುಗಳು ಉತ್ಪಾದಿಸಿದ ಕೃಷಿ ಮತ್ತು ವನೋತ್ಪನ್ನಗಳ ಒಡೆತನ
ಗಳಿಸಿಕೊಳ್ಳುತ್ತಿದ್ದರು. ಈ ಜಮೀನುದಾರರಲ್ಲಿ ಎರಡು ವಿಧಗಳಿದ್ದವು. ಪ್ರಜಾ ಗವುಂಡರು
ಅಂತಸ್ತಿನಲ್ಲಿ , ಧನಾಡ್ಯ ಪ್ರಭು ಗವುಂಡರಿಗಿಂತ ಕೆಳಗಿದ್ದರು. ಮಲೆನಾಡು ಪ್ರದೇಶದಲ್ಲಿ ,
ಸೂಕ್ತ ಹವಾಮಾನದ ಕಾರಣ, ಪಶುಪಾಲನೆ, ತೋಟಗಾರಿಕೆ ಮತ್ತು ಸಾಂಬಾರ ಪದಾರ್ಥಗಳ ಕೃಷಿ
ನಡೆಯುತ್ತಿತ್ತು. ಬಯಲುನಾಡಿನಲ್ಲಿ ಭತ್ತ ಮತ್ತು ಜೋಳವನ್ನು ಬೆಳೆಯಲಾಗುತ್ತಿತ್ತು.
ಸ್ಥಳೀಯರ ಖರ್ಚಿನಲ್ಲಿ ಕಟ್ಟಿ , ದುರಸ್ತಿ ಮಾಡಲಾಗುತ್ತಿದ್ದ ಕೆರೆ ಕಟ್ಟೆಗಳು,
ಕಾಲುವೆಗಳು , ಬಾವಿಗಳು ಇವುಗಳ ಮೇಲೆ ಹೊಯ್ಸಳ ರಾಜರು ಸುಂಕ ವಿಧಿಸಿದ್ದರು. ದೊಡ್ಡ
ನೀರಾವರಿಗೆ ವಿಷ್ಣುಸಾಗರ,ಶಾಂತಿಸಾಗರ, ಬಲ್ಲಾಳರಾಯಸಾಗರ ಇತ್ಯಾದಿ ಕೆರೆಗಳನ್ನು ರಾಜ್ಯದ
ಖರ್ಚಿನಲ್ಲಿ ಕಟ್ಟಿಸಲಾಗಿತ್ತು.
ಪಶ್ಚಿಮ ಕರಾವಳಿಯಲ್ಲಿ , ಜನಸಾಮಾನ್ಯರ ಪ್ರಯಾಣಕ್ಕೆ ಮತ್ತು ಅಶ್ವಸೇನೆಗಳಿಗೆ ,
ಕುದುರೆಗಳನ್ನು ಆಮದು ಮಾಡಿ ಸರಬರಾಜು ಮಾಡುವುದು ದೊಡ್ಡ ವ್ಯಾಪಾರೋದ್ಯಮವಾಗಿತ್ತು.
ಕಾಡುಗಳಲ್ಲಿನ ಬೆಲೆಬಾಳುವ ತೇಗವೇ ಮೊದಲಾದ ಮರಗಳ ನಾಟಾ ತಯಾರಿಸಿ , ಇಂದಿನ
ಕೇರಳದಲ್ಲಿದ್ದ ಬಂದರುಗಳ ಮೂಲಕ ರಫ್ತು ಮಾಡಲಾಗುತ್ತಿತ್ತು. ಚೀನಾದಲ್ಲಿ ದೊರೆತ
ಶುಂಗ ಸಾಮ್ರಾಜ್ಯದ ದಾಖಲೆಗಳ ಪ್ರಕಾರ, ಉತ್ತರ
ಚೀನಾದಲ್ಲಿ ಭಾರತದ
ವ್ಯಾಪಾರಿಗಳು ಕಾಣಸಿಗುತ್ತಿದ್ದು , ಇದು ಸಮುದ್ರದಾಚೆಯ ಪ್ರದೇಶಗಳೊಂದಿಗೆ ಸಕ್ರಿಯ
ವ್ಯಾಪಾರ ಸಂಪರ್ಕವಿದ್ದುದನ್ನು ಸೂಚಿಸುತ್ತದೆ. ದಕ್ಷಿಣ ಭಾರತದಿಂದ ಜವಳಿ, ಸಾಂಬಾರ
ಪದಾರ್ಥಗಳು, ಔಷದೀಯ ಸಸ್ಯಗಳು, ರತ್ನಗಳು, ಮಣ್ಣಿನ ಸಾಮಗ್ರಿಗಳು, ಉಪ್ಪು, ಆಭರಣಗಳು,
ಬಂಗಾರ, ದಂತ, ಖಡ್ಗಮೃಗದ ಕೊಂಬು, ಸುವಾಸನಾ ದ್ರವ್ಯಗಳು, ಶ್ರೀಗಂಧ, ಕರ್ಪೂರ ಮೊದಲಾದ
ವಸ್ತುಗಳು ಚೀನಾ, ಧೋಫರ್, ಏಡನ್ ಮತ್ತು ಸಿರಾಫ್ ( ಈಜಿಪ್ಟ್, ಅರೇಬಿಯಾ ಮತ್ತು ಪರ್ಶಿಯಾ
ದೇಶಗಳಿಗೆ ಹೋಗಲು ಪ್ರವೇಶಬಂದರು)ಗಳಿಗೆ ರಫ್ತಾಗುತ್ತಿತ್ತು. ವಾಸ್ತುತಜ್ಞರು
(ವಿಶ್ವಕರ್ಮರು), ಶಿಲ್ಪಿಗಳು, ಕಲ್ಲು ಕಡೆಯುವವರು, ಚಿನಿವಾರರು ಇತ್ಯಾದಿ ದೇವಾಳಯಕ್ಕೆ
ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಂಬಂಧಿಸಿದ ಕುಶಲಕರ್ಮಿಗಳು, ಬಿರುಸಿನಿಂದ
ನಡೆಯುತ್ತಿದ್ದ ದೇವಾಲಯ ನಿರ್ಮಾಣದ ಕಾರ್ಯದಿಂದ , ಸಾಕ್ಡು ಸ್ಥಿತಿವಂತರಾಗಿದ್ದರು.
ನೆಲಗಂದಾಯವನ್ನು ಒಟ್ಟುಮಾಡುವ ಜವಾಬ್ದಾರಿ ಗ್ರಾಮ ಪಂಚಾಯತಿಗಳದ್ದಾಗಿತ್ತು. ಸಿದ್ಧಾಯ
ಎಂದು ಕರೆಯಲಾಗುತ್ತಿದ್ದ ನೆಲಗಂದಾಯದಲ್ಲಿ ಕುಲ ಎಂಬ ಮೂಲತಃ ಬೆಲೆಕಟ್ಟಿದ್ದಲ್ಲದೇ,
ವಿವಧ ಮೇಲುಗಂದಾಯವೂ ಅಡಕವಾಗಿತ್ತು. ವಿವಿಧ ವ್ಯವಸಾಯಗಳು, ವಿವಾಹಗಳು, ಗಾಡಿ ಅಥವಾ ರಥಗಳ
ಮೇಲೆ ಒಯ್ಯಲಾಗುತ್ತಿದ್ದ ಸರಕುಗಳು, ಸಾಕುಪ್ರಾಣಿಗಳು ಇವೆಲ್ಲದರ ಮೇಲೂ ಸುಂಕ
ಹೇರಲಾಗಿತ್ತು. ಬಂಗಾರ, ರತ್ನಗಳು, ಸುವಾಸನಾ ದ್ರವ್ಯಗಳು, ಶ್ರೀಗಂಧ, ಹಗ್ಗಗಳು, ನಾರು,
ಮನೆ, ಕುಲುಮೆ, ಅಂಗಡಿ, ಪಶುಮಂದೆಗಳು, ಕಬ್ಬಿನ ಗಾಣಗಳು ಇಂಥಾ ಪದಾರ್ಥಗಳಲ್ಲದೆ
ಕರಿಮೆಣಸು,
ವೀಳ್ಯದೆಲೆ,
ತುಪ್ಪ,
ಭತ್ತ,ಸಾಂಬಾರ
ದಿನಸಿಗಳು, ತಾಳೆಗರಿ, ತೆಂಗಿನಕಾಯಿ, ಸಕ್ಕರೆ ಇತ್ಯಾದಿ ಕೃಷ್ಯುತ್ಪನ್ನಗಳ ಮೇಲೂ ಸುಂಕ
ವಸೂಲಿ ಮಾಡಿದ ಹಳ್ಳಿ ದಾಖಲೆಗಳು ದೊರೆಯುತ್ತವೆ. ಕೆರಗಳ ನಿರ್ಮಾಣ ಮೊದಲಾದ ನಿರ್ದಿಷ್ಟ
ಕೆಲಸಗಳಿಗಾಗಿ ಗ್ರಾಮ ಪಂಚಾಯತಿಗೆ ಸುಂಕ ವಿಧಿಸುವ ಹಕ್ಕಿತ್ತು.
ಧರ್ಮ
ರಾಮಾನುಜಾಚಾರ್ಯ,
ಬಸವಣ್ಣ,
ಮಧ್ವಾಚಾರ್ಯ ೧೧ನೆಯ ಶತಮಾನದ ಮೊದಲಭಾಗದಲ್ಲಿ ಚೋಳರಿಂದ ಜೈನಧರ್ಮೀಯರಾಗಿದ್ದ ಪಶ್ಚಿಮ ಗಂಗರ ಪರಾಭವ ಹಾಗೂ ೧೨ನೆಯ ಶತಮಾನದಲ್ಲಿ
ವೀರಶೈವ ಮತ್ತು
ವೈಷ್ಣವ ಮತಗಳಲ್ಲಿ ಅನುಯಾಯಿಗಳ ಏರುತ್ತಿದ್ದ ಸಂಖ್ಯೆ , ಇವುಗಳಿಂದಾಗಿ
ಜೈನಧರ್ಮದಲ್ಲಿ ಆಸಕ್ತಿ ಇಳಿಮುಖವಾಯಿತು. ಕಂಬದಹಳ್ಳಿ ಮತ್ತು
ಶ್ರವಣಬೆಳಗೊಳ ಹೊಯ್ಸಳ ರಾಜ್ಯದ ಎರಡು ಉಲ್ಲೇಖನಾರ್ಹ ಜೈನ ಧರ್ಮಕೇಂದ್ರಗಳು. 8ನೆಯ ಶತಮಾನದಲ್ಲಿ
ಆದಿ ಶಂಕರರ ಅದ್ವೈತ ಮತ ಪ್ರಸಾರದೊಂದಿಗೆ ದಕ್ಷಿಣ ಭಾರತದಲ್ಲಿ
ಬೌದ್ಧಧರ್ಮದ
ಅವನತಿ ಪ್ರಾರಂಭವಾಯಿತು. ಹೊಯ್ಸಳರ ಕಾಲದಲ್ಲಿ ಬಳ್ಳಿಗಾವಿ ಮತ್ತು ಡಂಬಳ ಇವೆರಡೇ
ಬೌದ್ಧರ ಧಾರ್ಮಿಕ ಸ್ಥಳಗಳಾಗಿದ್ದವು. ವಿಷ್ಣುವರ್ಧನನ ರಾಣಿ ಶಾಂತಲಾದೇವಿ ,ಸ್ವತಃ
ಜೈನಧರ್ಮೀಯಳಾಗಿದ್ದರೂ , ವಿಷ್ಣುವಿನ ಕಪ್ಪೆ ಚೆನ್ನಿಗರಾಯನ ದೇವಾಲಯವನ್ನು ಕಟ್ಟಿಸಿದ್ದು
, ರಾಜಮನೆತನದ ಪರಮತ ಸಹಿಷ್ಣುತೆಗೆ ಉದಾಹರಣೆಯಾಗಿದೆ.
ಬಸವಣ್ಣ,
ಮಧ್ವಾಚಾರ್ಯ ಮತ್ತು
ರಾಮಾನುಜಾಚಾರ್ಯರಿಂದ ಪ್ರೇರಿತರಾದ ಮೂರು ಮುಖ್ಯ ಧಾರ್ಮಿಕ ಬೆಳವಣಿಗೆಗಳು ಹೊಯ್ಸಳರ ಆಡಳಿತದ ಕಾಲದಲ್ಲಿ ಘಟಿಸಿದವು.
ವೀರಶೈವ ಮತದ ಉಗಮ ಚರ್ಚಾಸ್ಪದವಾಗಿದ್ದರೂ, ೧೨ನೆಯ ಶತಮಾನದಲ್ಲಿ
ಬಸವಣ್ಣನವರ ಆಗಮನದೊಂದಿಗೆ ಇದು ಪ್ರವರ್ಧಮಾನಕ್ಕೆ ಬಂದಿತು.
ಬಸವಣ್ಣಮತ್ತು ಇತರ ವೀರಶೈವ ಶರಣರು ಜಾತಿರಹಿತ ಸಮಾಜವನ್ನು ಪ್ರತಿಪಾದಿಸಿದರು. "ಕಾಯಕವೇ ಕೈಲಾಸ" ಎಂದು ಬೋಧಿಸಿದ
ಬಸವಣ್ಣನವರು ಸರಳರೀತಿಯಲ್ಲಿ ವಚನಗಳನ್ನು ಜನಸಾಮಾನ್ಯರಿಗಾಗಿ ಬರೆದರು.
ಆದಿ ಶಂಕರರ ಬೋಧನೆಗಳನ್ನು ಒಪ್ಪದ
ಮಧ್ವಾಚಾರ್ಯರು ಜೀವಾತ್ಮ ಮತ್ತು ಪರಮಾತ್ಮ ಬೇರೆ ಬೇರೆ ಎಂದು ಪ್ರತಿಪಾದಿಸಿದರು (ದ್ವೈತ ಸಿದ್ಧಾಂತ). ಈ ಸಿದ್ಧಾಂತವು ಜನಪ್ರಿಯವಾಗಿ, ಮುಂದೆ
ಮಧ್ವಾಚಾರ್ಯರು ಉಡುಪಿಯಲ್ಲಿ ಎಂಟು ಮಠಗಳನ್ನು ಸ್ಥಾಪಿಸಿದರು. ಶೀರಂಗದ ವೈಷ್ಣವ ಮಠದ ಗುರುಗಳಾಗಿದ್ದ
ರಾಮಾನುಜಾಚಾರ್ಯರು ಭಕ್ತಿ ಮಾರ್ಗವನ್ನು ಬೋಧಿಸಿ,
ಆದಿ ಶಂಕರರ ಅದ್ವೈತ ಸಿದ್ಧಾಂತದ ಮೇಲೆ ಶ್ರೀಭಾಷ್ಯ ಎಂಬ ಭಾಷ್ಯವನ್ನು ಬರೆದರು.
ಈ ಧಾರ್ಮಿಕ ಸಿದ್ಧಾಂತಗಳು ಆ ಕಾಲದ ದಕ್ಷಿಣ ಭಾರತದ ಸಂಸ್ಕೃತಿ, ಸಾಹಿತ್ಯ, ಕಾವ್ಯ
ಮತ್ತು ಶಿಲ್ಪಕಲೆಗಳ ಮೇಲೆ ಅಪಾರ ಪ್ರಭಾವ ಬೀರಿದವು. ಈ ತತ್ವಜ್ಞಾನಿಗಳ ಬೋಧನೆಯನ್ನು
ಆಧರಿಸಿ ಮುಂದಿನ ಶತಮಾನಗಳಲ್ಲಿ ಮಹತ್ವದ ಸಾಹಿತ್ಯ ಮತ್ತು ಕಾವ್ಯ ಕೃತಿಗಳನ್ನು
ರಚಿಸಲಾಯಿತು. ವಿಜಯನಗರದ ಸಾಳ್ವ, ತುಳುವ ಮತ್ತು ಅರವೀಡು ರಾಜಮನೆತನಗಳು
ವೈಷ್ಣವರಾಗಿದ್ದವು. ವಿಜಯನಗರದ ವಿಠ್ಠಲಪುರ ಪ್ರದೇಶದ ವೈಷ್ಣವ ದೇವಾಲಯವೊಂದರಲ್ಲಿ
ರಾಮಾನುಜಾಚಾರ್ಯರರಾಮಾನುಜಾಚಾಯ್ ವಿಗ್ರಹವಿದೆ.ಮುಂದೆ ಮೈಸೂರು ಸಂಸ್ಥಾನದಲ್ಲಿದ್ದ ವಿದ್ವಾಂಸರುಗಳು
ರಾಮಾನುಜಾಚಾರ್ಯರ ಸಿದ್ಧಾಂತಗಳನ್ನು ಎತ್ತಿ ಹಿಡಿಯುವ ಗ್ರಂಥಗಳನ್ನು ಬರೆದರು.
ಜೈನಧರ್ಮದಿಂದ ಮತಾಂತರ ಹೊಂದಿ ವೈಷ್ಣವನಾದ ಮೇಲೆ ಹೊಯ್ಸಳ ರಾಜ ವಿಷ್ಣುವರ್ಧನನು ಅನೇಕ ವೈಷ್ಣವ ದೇವಾಲಯಗಳನ್ನು ಕಟ್ಟಿಸಿದನು.
ಮಧ್ವಾಚಾರ್ಯರ ಪರಂಪರೆಯಲ್ಲಿ ಅವರ ನಂತರ ಬಂದ ಜಯತೀರ್ಥ, ವ್ಯಾಸತೀರ್ಥ, ಶ್ರೀಪಾದರಾಯ, ವಾದಿರಾಜತೀರ್ಥ ಮತ್ತು ದಾಸ ಪರಂಪರೆಯ ವಿಜಯದಾಸ, ಗೋಪಾಲದಾಸ ಮತ್ತಿತರರು
ಮಧ್ವಾಚಾರ್ಯರ ಬೋಧನೆಗಳನ್ನು ದೂರದೂರಕ್ಕೆ ಪ್ರಸಾರ ಮಾಡಿದರು. ನಂತರದ ತತ್ವಜ್ಞಾನಿಗಳಾದ
ಗುಜರಾತಿನ
ವಲ್ಲಭಾಚಾರ್ಯ ಮತ್ತು ಬಂಗಾಳದ ಚೈತನ್ಯ ಇವರೂ ಕೂಡ ಮಧ್ವಾಚಾರ್ಯರ ತತ್ವಗಳಿಂದ
ಪ್ರಭಾವಿತರಾಗಿದ್ದರು. ಮಧ್ವಾಚಾರ್ಯರ ಬೋಧನೆಗಳಿಂದ ಪ್ರಭಾವಿತವಾದ ಮತ್ತೊಂದು ಭಕ್ತಿ
ಮಾರ್ಗದ ಅಲೆ ೧೭-೧೮ನೆಯ ಶತಮಾನದಲ್ಲಿ ಬಂದಿತು.
ಸಾಹಿತ್ಯ
ಹೊಯ್ಸಳ ಆಡಳಿತದ ಕಾಲದಲ್ಲಿ
ಸಂಸ್ಕೃತ ಸಾಹಿತ್ಯ ಜನಪ್ರಿಯವಾಗಿದ್ದರೂ,
ಕನ್ನಡ ವಿದ್ವಾಂಸರಿಗೆ ರಾಜಾಶ್ರಯ ಹೆಚ್ಚಾಯಿತು. ೧೨ನೆಯ ಶಶತಮಾನದಲ್ಲಿ ಕೆಲ ಸಾಹಿತ್ಯ ಕೃತಿಗಳು
ಚಂಪೂ ಶೈಲಿಯಲ್ಲಿ ಬರೆಯಲ್ಪಟ್ಟರೂ , ಇತರ ವಿಶಿಷ್ಟ ಶೈಲಿಗಳೂ ಜನಪ್ರಿಯವಾಗಿದ್ದವು.
ಸಾಂಗತ್ಯ, ಷಟ್ಪದಿ,
ತ್ರಿಪದಿ ಮತ್ತು
ರಗಳೆ ಶೈಲಿಗಳು ಆಧುನಿಕವೆನಿಸಿದ್ದವು.
ತೀರ್ಥಂಕರರ (
ಜೈನ ಮುನಿಗಳು)ಮಹಿಮೆಯನ್ನು ಎತ್ತಿಹಿಡಿಯುವುದನ್ನು ಜೈನ ಕೃತಿಗಳು ಮುಂದುವರಿಸಿದವು.
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಇಂದಿಗೂ ಹಸಿರಾಗಿರುವ
ಜನ್ನ,
ರುದ್ರಭಟ್ಟ,
ನಾಗಚಂದ್ರ,
ಹರಿಹರ ಮತ್ತು ,ಅವನ ಸೋದರಸಂಬಂಧಿ,
ರಾಘವಾಂಕ ಇವರೆಲ್ಲರಿಗೂ ಹೊಯ್ಸಳ ರಾಜಾಸ್ಥಾನವು ಆಶ್ರಯವಿತ್ತು ಪ್ರೋತ್ಸಾಹಿಸಿತು. ೧೨೦೯ರಲ್ಲಿ ಜೈನ ಕವಿ
ಜನ್ನನು ಯಶೋಧರಚರಿತೆ
ಎಂಬ ಪ್ರಸಿದ್ಧ ಕೃತಿಯನ್ನು ರಚಿಸಿದನು. ಊರ ದೇವರು ಮಾರಿಗೆ ಇಬ್ಬರು ಬಾಲಕರನ್ನು
ಬಲಿಕೊಡಲು ಹೊರಟ ರಾಜನೊಬ್ಬನ ಕಥೆಯಿದು. ಆ ಬಾಲಕರ ಮೇಲೆ ಕನಿಕರ ಬಂದು , ರಾಜನು
ಅವರಿಬ್ಬರನ್ನೂ ಬಿಡುಗಡೆ ಮಾಡಿ , ನರಬಲಿಯ ಪದ್ಧತಿಗೆ ವಿದಾಯ ಹೇಳುತ್ತಾನೆ. ಈ ಕೃತಿಗಾಗಿ
ಹೊಯ್ಸಳ ರಾಜ ವೀರಬಲ್ಲಾಳನಿಂದ ಜನ್ನನಿಗೆ ಕವಿಚಕ್ರವರ್ತಿ ಎಂಬ ಬಿರುದು
ಪ್ರಾಪ್ತವಾಯಿತು.
ಎರಡನೆಯ ವೀರಬಲ್ಲಾಳನ ಆಸ್ಥಾನದಲ್ಲಿಯ ಮಂತ್ರಿ ಚಂದ್ರಮೌಳಿಯ ಆಶ್ರಯದಲ್ಲಿದ್ದ ಸ್ಮಾರ್ಥ ಬ್ರಾಹ್ಮಣ
ರುದ್ರಭಟ್ಟನು
ಹೆಸರಾಂತ ಬ್ರಾಹ್ಮಣ ಕವಿಗಳಲ್ಲಿ ಮೊದಲನೆಯವನು. ಆತನ ಪ್ರಸಿದ್ಧ ಚಂಪೂ ಶೈಲಿಯ ಜಗನ್ನಾಥ
ವಿಜಯ ಕೃತಿಯು ವಿಷ್ಣು ಪುರಾಣ ಆಧಾರಿತವಾಗಿದ್ದು ಇದರ ಕಥಾವಸ್ತು ಶ್ರೀಕ್ರಷ್ಣನಿಂದ
ಬಾಣಾಸುರನ ಸಂಹಾರ.
ಒಂದನೆಯ ನರಸಿಂಹನ ಆಸ್ಥಾನದಲ್ಲಿದ್ದ
ವೀರಶೈವ ಕವಿ
ಹರಿಹರ , (ಹರೀಶ್ವರ ಎಂದೂ ಕರೆಯುವುದುಂಟು ) ಹಳೆಯ
ಜೈನ ಚಂಪೂ ಶೈಲಿಯಲ್ಲಿ ಗಿರಿಜಾಕಲ್ಯಾಣ ಕೃತಿಯನ್ನು ರಚಿಸಿದನು. ಹತ್ತು ಭಾಗಗಳಿರುವ ಇದರ ಕಥಾವಸ್ತು ಶಿವ ಪಾರ್ವತಿಯರ ಪರಿಣಯ.
ವಚನ ಸಾಹಿತ್ಯ ಪರಂಪರೆಯ ಭಾಗವಾಗಿರದಿದ್ದ ಮೊದಮೊದಲ
ವೀರಶೈವ ಕವಿಗಳಲ್ಲಿ ಇವನೂ ಒಬ್ಬ.
ಹಳೇಬೀಡಿನ ಕರಣಿಕರ ಕುಟುಂಬದಿಂದ ಬಂದ ಹರಿಹರನು
ಹಂಪೆಯಲ್ಲಿ ಅನೇಕ ವರ್ಷಗಳನ್ನು ಕಳೆದು , ನೂರಕ್ಕೂ ಹೆಚ್ಚು ರಗಳೆಗಳನ್ನು ರಚಿಸಿದನು. ಇವು ವಿರೂಪಾಕ್ಷ ದೇವರ ಗುಣಗಾನ ಮಾಡುವ ರಗಳೆಗಳಾಗಿವೆ.
ರಾಘವಾಂಕ ತನ್ನ ಹರಿಶ್ಚಂದ್ರ ಕಾವ್ಯದ ಮೂಲಕ
ಷಟ್ಪದಿಯ ಬಳಕೆಯನ್ನು ಮೊಟ್ಟಮೊದಲ ಬಾರಿಗೆ ಮಾಡಿದ.
ಕನ್ನಡ ವ್ಯಾಕರಣದ ನಿಯಮಗಳನ್ನು ಕೆಲವೊಮ್ಮೆ ಉಲ್ಲಂಘಿಸಿದ್ದರೂ, ಇದು ಕನ್ನಡ ಸಾಹಿತ್ಯದ ಅತಿಶ್ರೇಷ್ಟ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಡುತ್ತದೆ.
ಇನ್ನು ಸಂಸ್ಕೃತದಲ್ಲಿ , ಮಧ್ವಾಚಾರ್ಯರು , ಬ್ರಹ್ಮಸೂತ್ರಗಳಿಗೆ ಭಾಷ್ಯವನ್ನು
ಬರೆದರು. ಇದಲ್ಲದ, ಇತರ ವೈದಿಕ ಶಾಖೆಗಳನ್ನು ಟೀಕಿಸುವ ವಿಮರ್ಶೆಗಳನ್ನೂ ಅವರು ಬರೆದರು.
ತಮ್ಮ ತತ್ವಗಳಿಗೆ ಪ್ರಮಾಣಗ್ರಂಥಗಳಾಗಿ , ವೇದಗಳ ಬದಲಾಗಿ , ಪುರಾಣಗಳನ್ನು
ಆರಿಸಿಕೊಂಡರು. ವಿದ್ಯಾತೀರ್ಥ ಬರೆದ ರುದ್ರಪ್ರಶ್ಣಾಭಾಷ್ಯವು ಆ ಕಾಲದ ಮತ್ತೊಂದು
ಪ್ರಸಿದ್ಧ ಗ್ರಂಥ.
ಶಿಲ್ಪಕಲೆ
ಸೋಮನಾಥಪುರದಲ್ಲಿ ಹೊಯ್ಸಳ ಶಿಲ್ಪಕಲೆ
ಹೊಯ್ಸಳರ ಸಾಮ್ರಾಜ್ಯ ವಿಸ್ತರಣೆಗಿಂತಲೂ , ಕಲೆ ಮತ್ತು ಶಿಲ್ಪಕೆಲಗಳಿಗೆ ಅವರಿತ್ತ
ಪ್ರೋತ್ಸಾಹಕ್ಕಾಗಿ ಈ ಸಾಮ್ರಾಜ್ಯದ ಬಗ್ಯೆ ಆಧುನಿಕ ಸಂಶೋಧನೆ ಬಹು ಮುಖ್ಯವಾಗುತ್ತದೆ.
ದಕ್ಷಿಣದಿಂದ ಪಾಂಡ್ಯರು ಮತ್ತು ಉತ್ತರದ ಸೇವುಣರಿಂದ ಸದಾ ದಾಳಿಯ ಅಪಾಯವಿದ್ದರೂ, ಹೊಯ್ಸಳ
ರಾಜ್ಯದಾದ್ಯಂತ ದೇವಾಲಯನಿರ್ಮಾಣ ಕಾರ್ಯ ಬಿರುಸಿನಿಂದ ನಡೆಯುತ್ತಿತ್ತು. ಪಷ್ಚಿಮ
ಚಾಲುಕ್ಯರ ಶಿಲ್ಪಕಲಾಶೈಲಿಯ ಶಾಖೆಯಾಗಿ ಬೆಳೆದ ಈ ಕಾಲದ ಶೈಲಿಯಲ್ಲಿ ದ್ರಾವಿಡ ಪ್ರಭಾವ
ಸ್ಪಷ್ಟವಾಗಿ ಕಂಡುಬರುತ್ತದೆ. ಸಾಂಪ್ರದಾಯಿಕ ದ್ರಾವಿಡ ಶೈಲಿಗಿಂತಲೂ ವಿಶಿಷ್ಟವಾಗಿದ್ದ ಈ
ಶೈಲಿಯನ್ನು ಕರ್ನಾಟ ದ್ರಾವಿಡ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ.
ಹೊಯ್ಸಳರ ದೇವಸ್ಥಾನ ಶಿಲ್ಪಕಲೆಯಲ್ಲಿ ಕುಶಲತೆಗೆ ಪ್ರಾಮುಖ್ಯತೆಯನ್ನು
ನೀಡಲಾಗುತ್ತಿತ್ತು. ದೇಗುಲದ ಗೋಪುರದ ವಿಮಾನಗಳಲ್ಲಿ ಎತ್ತರ ಮತ್ತು ಗಾತ್ರಕ್ಕಿಂತ
ಅತ್ಯಂತ ನೈಪುಣ್ಯಶೀಲ ಕಲೆಯನ್ನು ಸೃಷ್ಟಿಸುವುದಕ್ಕೆ ಒತ್ತು ನೀಡಲಾಗುತ್ತಿತ್ತು.
ಮೃದುವಾದ ಕಲ್ಲಾಗಿದ್ದ
ಬಳಪದ ಕಲ್ಲನ್ನು (Soapstone - Chloritic schist) ದೇಗುಲಗಳನ್ನು ಕಟ್ಟಲು ಉಪಯೋಗಿಸಲ್ಪಡುತ್ತಿತ್ತು.
ಬೇಲೂರಿನ ಚೆನ್ನಕೇಶವ ದೇವಸ್ಥಾನ (೧೧೧೭),
ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನ (೧೧೨೧),
ಸೋಮನಾಥಪುರದ ಚೆನ್ನಕೇಶವ ದೇವಸ್ಥಾನ (೧೨೭೯),
ಅರಸೀಕೆರೆ (೧೨೨೦),
ಅಮೃತಪುರ (೧೧೯೬),
ಯಳೇಶಪುರದ ಎಳ್ಳೇಶ್ವರ್ ದೇವಾಲಯವು (೧೨೩೮ರ ಜನವರಿ ೨೭),
ಬೆಳವಾಡಿ (೧೨೦೦) ಮತ್ತು
ನುಗ್ಗೇಹಳ್ಳಿ (೧೨೪೬)
ಶಿವಮೊಗ್ಗ ಜಿಲ್ಲೆಯ
ಸಾಗರ ತಾಲೂಕಿನ
ನಾಡಕಲಸಿ (೧೨೧೮) ದೇವಸ್ಥಾನಗಳು ಹೊಯ್ಸಳ ಶಿಲ್ಪಕಲೆಯ ಪ್ರಮುಖ ಉದಾಹರಣೆಗಳು. ಇವೇ ಅಲ್ಲದೆ ಹಾಸನ ಜಿಲ್ಲೆಯ
ದೊಡ್ಡಗದ್ದವಳ್ಳಿಯ
ಮಹಾಲಕ್ಶ್ಮಿಯ ದೇವಾಲಯ, ಕೋರವಂಗಲದ ಬೂಚೇಶ್ವರ, ಹಾರನಹಳ್ಳಿಯ ಲಕ್ಷ್ಮೀನರಸಿಂಹ,ಮೊಸಳೆಯ
ಚೆನ್ನಕೇಶವ-ನಾಗೇಶ್ವರ ಜೋಡಿ ದೇವಾಲಯ ಮತ್ತು ಮಂಡ್ಯ ಜಿಲ್ಲೆಯ ಹೊಸಹೊಳಲಿನಲ್ಲಿರುವ
ದೇವಾಲಯ ಹೊಯ್ಸಳರ ಕಾಲದ ಕಲಾಕೌಶಲಕ್ಕೆ ನಿದರ್ಶನವಾಗಿವೆ.ಅನೇಕ ದೇವಾಲಯಗಳ ಹೊರಗಿನ
ಗೋಡೆಗಳಲ್ಲಿ
ಹಿಂದೂ ಪುರಾಣಗಳ ಕಥನಗಳನ್ನು ನಿರೂಪಿಸಲಾಗಿದೆ. ಪ್ರದಕ್ಷಣೆಯ ದಿಕ್ಕಿನಲ್ಲಿ ಈ ಕಥನಗಳ ನಿರೂಪಣೆ ಸಾಗುತ್ತದೆ.
ಭಾಷೆ
ಕನ್ನಡ ಮತ್ತು ಸಂಸ್ಕೃತ ಭಾಷೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು.
ಪಾಠಶಾಲೆಗಳಾಗಿಯೂ ಉಪಯೋಗಿಸಲಾಗುತ್ತಿದ್ದ ದೇವಾಲಯಗಳಲ್ಲಿ ಬ್ರಾಹ್ಮಣ ಪಂಡಿತರು
ಸಂಸ್ಕೃತದಲ್ಲಿ ಕಲಿಸಿದರೆ, ಜೈನ ಮತ್ತು ಬೌದ್ಡ ವಿಹಾರಗಳಲ್ಲಿ, ಮುನಿಗಳು ಶಿಷ್ಯರಿಗೆ
ವಿದ್ಯೆ ಕಲಿಸುತ್ತಿದ್ದರು. ಉಚ್ಚ ವಿದ್ಯಾಕೇಂದ್ರಗಳಿಗೆ ಘಟಿಕಾ ಎಂದು ಹೆಸರಿತ್ತು.
ಪ್ರವರ್ಧಮಾನಕ್ಕೆ ಬರುತ್ತಿದ್ದ ಭಕ್ತಿ ಪಂಥವು ವಚನಗಳು ಮತ್ತು ದೇವರನಾಮಗಳಿಗೆ ಕನ್ನಡ
ಭಾಷೆಯನ್ನು ಬಳಸಿತು. ಸಾಹಿತ್ಯ ಕೃತಿಗಳನ್ನು ತಾಳೆಗರಿಯ ಮೇಲೆ ರಚಿಸಲಾಗುತ್ತಿತ್ತು.
ಹಿಂದಿನ ಶತಮಾನಗಳಲ್ಲಿ ಜೈನ ಸಾಹಿತ್ಯ ಕೃತಿಗಳು ಪ್ರಧಾನವಾಗಿದ್ದರೂ, ಹೊಯ್ಸಳರ ಕಾಲದಲ್ಲಿ
ಶೈವ ಮತ್ತು ಬ್ರಾಹ್ಮಣ ಕೃತಿಗಳು ಹೆಚ್ಚು ಹೆಚ್ಚಾಗಿ ಬರಲಾರಂಭಿಸಿದವು. ಸಂಸ್ಕೃತ
ಸಾಹಿತ್ಯದಲ್ಲಿ ಕಾವ್ಯ, ವ್ಯಾಕರಣ , ವಿಶ್ವಕೋಶ , ಕೈಪಿಡಿಗಳು , ಹಿಂದಿನ ಕೃತಿಗಳ ಮೇಲೆ
ಭಾಷ್ಯಗಳು, ನಾಟಕಗಳು, ಗದ್ಯ ಕಥೆಗಳು ಇತ್ಯಾದಿಗಳು ರಚನೆಯಾದವು. ತಾಮ್ರ ಮತ್ತು
ಶಿಲಾಶಾಸನಗಳು ಕನ್ನಡ, ಸಂಸ್ಕೃತ ಅಥವಾ ಇವೆರಡೂ ಭಾಷೆಯಲ್ಲಿರುತ್ತಿದ್ದವು. ಹಿನ್ನೆಲೆ ,
ರಾಜರ ಬಿರುದು ಬಾವಲಿಗಳು ಇತ್ಯಾದಿಗಳು ಸಂಸ್ಕೃತದಲ್ಲಿದ್ದರೆ, ಉಂಬಳಿಯ ವಿವರಗಳು, ಭೂಮಿಯ
ತಪಶೀಲು, ಸರಹದ್ದು, ಸ್ಥಳೀಯ ಆಡಳಿತಾಧಿಕಾರಿಗಳು, ಕಂದಾಯ , ಉಂಬಳಿ ಪಡೆದವನ ಹಕ್ಕು
ಮತ್ತು ಕರ್ತವ್ಯಗಳು, ಸಾಕ್ಷಿಗಳು ಈ ವಿವರಗಳು ಕನ್ನಡದಲ್ಲಿರುತ್ತಿದ್ದವು.ಈ ಮೂಲಕ ಶಾಸನದ
ವಿವರಗಳು ಜನಸಾಮಾನ್ಯರಿಗೂ ಅರ್ಥವಾಗುವಂತೆ ನೋಡಿಕೊಳ್ಳಲಾಗುತ್ತಿತ್ತು.